``ಯಕ್ಷಗಾನಕ್ಕೆ ತುಳು ತಿಟ್ಟು ಪ್ರಕಾರ ಬೇಡ`` : ವೆಂಕಟ್ರಾಮ್ ಭಟ್
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಬುಧವಾರ, ಫೆಬ್ರವರಿ 11 , 2015
|
ಫೆಬ್ರವರಿ 11, 2015
|
``ಯಕ್ಷಗಾನಕ್ಕೆ ತುಳು ತಿಟ್ಟು ಪ್ರಕಾರ ಬೇಡ`` : ವೆಂಕಟ್ರಾಮ್ ಭಟ್
ಸುಳ್ಯ :
ಭಾಷೆ ಎಂದರೆ ಮನಸ್ಸಿನ ಭಾವನೆ ಸೂಚಿಸುವ ಸಾಧನ. ಆದ್ದರಿಂದ ಯಕ್ಷಗಾನಕ್ಕೆ ತುಳು ತಿಟ್ಟು ಎಂಬ ಬೇರೆ ತಿಟ್ಟು ಬೇಡ. ತುಳು ಎಂದರೆ ಕೇವಲ ಸಾಮಾಜಿಕ ಯಕ್ಷಗಾನ ಮಾಡಬೇಕೆಂಬುದು ತಪ್ಪು. ಹರಕೆ ಆಟ ಆಡಿಸುವವರು ನಮಗೆ ತುಳುವಿನಲ್ಲೇ ಆಟ ಆಡಬೇಕೆಂದು ಆಗ್ರಹಿಸಿದರೆ ತುಳು ಭಾಷೆಯಲ್ಲಿ ಯಕ್ಷಗಾನ ಮಾಡುವ ಒಂದೆರಡು ಮೇಳಗಳು ಹುಟ್ಟಿಕೊಳ್ಳಬಹುದು ಎಂದು ಯಕ್ಷಗಾನ ಕಲಾವಿದ ವೆಂಕಟ್ರಾಮ್ ಭಟ್ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ದುಗ್ಗಲಡ್ಕದಲ್ಲಿ ನಡೆದ ತುಳು ಮಿನದನ ಸಮ್ಮೇಳನದ ತುಳುನಾಡ್ದ ವರ್ತಮಾನದ ತಲ್ಲಣೊಲು ವಿಚಾರಗೋಷ್ಠಿಯಲ್ಲಿ ಯಕ್ಷಗಾನದ ಬಗ್ಗೆ ಮಾತನಾಡಿದರು.
ದೈವಾರಾಧನೆ ನಂಬಿಕೆ, ಆಚರಣೆ ಬಗ್ಗೆ ದೈವ ನರ್ತಕ ನಾರಾಯಣ ಪರವ ಅವರು ಮಾತನಾಡಿ, ವರ್ತಮಾನದಲ್ಲಿ ನಂಬಿಕೆ ಕಡಿಮೆಯಾಗಿದೆ, ದೈವಾರಾಧನೆ ಪ್ರತಿಷ್ಠೆಯ ವಿಚಾರವಾಗಿದೆ. ದೈವಾ ರಾಧನೆಯಲ್ಲಿ ಆದ್ಯತೆ, ಸಂಸ್ಕಾರಕ್ಕೆ ಬೆಲೆ ನೀಡಿ ಆರಾಧನೆಯಲ್ಲಿ ಜಾಗೃತಿ ಭಾವನೆ ಬರಬೇಕು. ಹಿರಿಯರ ಮಾರ್ಗದರ್ಶನ ಕಡಿಮೆಯಾಗಿದೆ, ಕಿರಿಯರಲ್ಲಿರುವ ಅನೇಕ ಜಿಜ್ಞಾಸೆಗಳಿಗೆ ಉತ್ತರ ಸಿಗಬೇಕಿದೆ. ಆಚರಣೆಗಳಿಗೆ ಚೌಕಟ್ಟು ಬೇಕು, ಈಗಿನ ಕಟ್ಟುಪಾಡಿಗೆ ಪೂರಕವಾಗಿ ಶಿಸ್ತುಬದ್ಧ ಆಚರಣೆ ನಡೆಯಬೇಕು, ದೈವಾರಾಧನೆಯ ಚೌಕಟ್ಟನ್ನು, ನೀತಿ ನಿಯಮಗಳನ್ನು ಊರವರು ಮತ್ತು ದೈವ ನರ್ತಕರು ಚರ್ಚಿಸಿ ನಿರ್ಣಯ ಮಾಡಬೇಕು ಎಂದರು.
ಅಧ್ಯಕ್ಷತೆಯನ್ನು ವಹಿಸಿದ ಎ.ಕೆ.ಹಿಮಕರ ಮಾತನಾಡಿ ಪ್ರಸ್ತುತ ಕಾಲಮಾನದಲ್ಲಿ ನಾವು ವೇದಿಕೆ ಮೇಲೆ ಮಾತನಾಡುವ ತುಳು ಅಷ್ಟೊಂದು ಸ್ವತ್ಛವಾಗಿಲ್ಲ. ಬೇರೆ ಬೇರೆ ಭಾಷೆಗಳ ಮಿಶ್ರಣ ಇದೆ. ಆದ್ದರಿಂದ ತುಳು ಭಾಷೆಯ ಬಗ್ಗೆ ಕೀಳರಿಮೆ ಬೇಡ. ಭೂತಾರಾಧನೆಯಲ್ಲಿ ಅವರು ಬಳಸುವ ಭಾಷೆಯೇ ಮೂಲ ತುಳು ಎನ್ನಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಿರಿಲ್ ಡಿ'ಸೋಜಾ ಸ್ವಾಗತಿಸಿದರು. ಜಯಶೀಲ ನಾಯರ್ ವಂದಿಸಿದರು. ಚಂದ್ರಶೇಖರ ಬಿಳಿನೆಲೆ ಕಾರ್ಯಕ್ರಮ ನಿರೂಪಿಸಿದರು.
ಕೃಪೆ :
http://udayavani.com
|
|
|